ಸಮೃದ್ದನಗರ ನಿರ್ಮಾಣಕ್ಕೆ ಬದ್ಧ: ಸುಧೀರ್ ಶೆಟ್ಟಿ
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸ್ವಚ್ಛ ಹಾಗೂ ಸಮೃದ್ಧ ನಗರವನ್ನು ರೂಪಿಸುವ ಜವಾಬ್ದಾರಿಯನ್ನು ಪಾಲಿಕೆಯ ಹೆಗಲ ಮೇಲಿದೆ. ಅದನ್ನು ಸರ್ವಪ್ರಯತ್ನಗಳೊಂದಿಗೆ ನಿರ್ವಹಿಸಲು ಬದ್ಧ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಸನಾತನ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನರ ಜೀವನಶೈಲಿಯು ಸುಧಾರಿಸಬೇಕಾದರೆ ಸೌಕರ್ಯಗಳು ಸಕಾಲಿಕವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ಜನರ ಅಭಿಪ್ರಾಯ ಮತ್ತು ಸಲಹೆಗಳಿಗೆ ಸದಾ ಸ್ವಾಗತವಿದೆ. ಎಲ್ಲರೂ ಒಟ್ಟಾಗಿ ಸುಂದರ ನಗರ ನಿರ್ಮಾಣಕ್ಕೆ ಕಟಿಬದ್ಧರಾಗಿರಬೇಕು ಎಂದರು.
ಶಿಕ್ಷಣದಲ್ಲಿ ರಾಷ್ಟ್ರೀಯತೆ ಎಂಬ ವಿಷಯದ ಬಗ್ಗೆ ಮಾತನಾಡಿದ ಯುವವಾಗಿ ಲತೇಶ್ ಬಾಕ್ರಬೈಲು ಅವರು, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೇಶೀಯ ಅಂಶಗಳಿಗೆ ಒತ್ತು ಕೊಡದೇ ಇರುವುದರ ಫಲವಾಗಿ ನಮ್ಮತನದ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಅದನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದರು.
ಸನಾತನ ನಾಟ್ಯಾಲಯದ ಗುರುಗಳಾದ ವಿದುಷಿ ಕರ್ನಾಟಕ ಕಲಾಶ್ರೀಶಾರದಾಮಣಿಶೇಖರ್, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸನಾತನ ನಾಟ್ಯಾಲಯದ ನಿರ್ದೇಶ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ವಿದುಷಿ ಶ್ರೀಲತಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರಿಂದ ನೃತ್ಯೋತ್ಸವ ನಡೆಯಿತು.
Photo Gallery
Media Reports